Saturday, February 23, 2019

ಜನಪದ ಸಾಹಿತ್ಯ.

೧. ಸಾವಿರ ಕೊಟ್ಟರು ಸವತಿಯ ಮನೆ ಬೇಡ
     ಸಾವಿರದ ಮ್ಯಾಲೆ ಐನೂರು ಕೊಟ್ಟರೂ
     ಮಲ ಮಕ್ಕಳಿರುವ ಮನಿಬ್ಯಾಡ

೨.  ಎಳೆಗರು ಎತ್ತಲ್ಲ ದಳವಾಯಿ ದೊರೆಯಲ್ಲ
      ಮನೆಗೆ ಬಂದಳಿಯ ಮಗನಲ್ಲ ತೌರಿಗೆ
      ಮಾತ ತಂದವಳು ಮಗಳಲ್ಲ

೩.  ಕೊಟ್ಟು ಕುದಿಯಬೇಡ ಮಾಡಿ ಹಂಗಿಸಬೇಡ
      ಇಷ್ಟುಂಡರೆಂದು ಅನ್ನಬೇಡ ಮೂರು ಮಾತು
      ಮುಟ್ಟುವುದು ಶಿವನ ಬಳಿಯಲ್ಲಿ

೪.  ಅಣ್ಣನ ಹೆಂಡತಿ ಕಣ್ಣೀಗೆ ಒಳ್ಳೆಯವಳು
      ಸುಣ್ಣನ ನೀರ ಒಲೆಮುಂದೆ ಇಟಗೊಂಡು
      ಎಮ್ಮಿ ಹಾಲೆಂದು ಬಡಿಸ್ಯಾಳ

೫.  ಅಂಗೀಯ ಮ್ಯಾಲಂಗಿ ಛಂದೇನೊ ನನರಾಯ
      ರಂಬೀ ಮ್ಯಾಲ ರಂಬಿ ಪ್ರತಿರಂಬಿ ಬಂದರ
      ಛಂದೇನೋ ರಾಯ ಮನಿಯಾಗ

೬.  ಕಂದನ ಕೊಡು ಶಿವನೆ ಬಂಧನ ಪಡಲಾರೆ
     ಹಂಗೀನ ಬಾನ ಉಣಲಾರೆ|ಮರ್ತ್ಯದಾಗೆ
     ಬಂಜೆಂಬ ಶಬುದ ಹೊರಲಾರೆ

೭.  ಮಾರಾಯರಯ ಬೈದರ ಬಾರವು ಕಣ್ಣೀರು
      ಮಾರಾಯರ ತಮ್ಮ ಮೈದೂನ ಬೈದರ
      ಮಾಡಿಲ್ಲದ ಮಳೆಯು ಸುರಿದಂಗ
೮.  ಹಲಗೆಯ ಹಿಡಿದಿಲ್ಲ ಬಳಪದಿ ಬರೆದಿಲ್ಲ
      ಶ್ರೀಗುರು ನಮಗೆ ಬರೆಸಿಲ್ಲ ತಾಯಿಗಳಿರ
      ಲೆಖ್ಖಣಿಕೆ ನಮಗೆ ಗೊತ್ತಿಲ್ಲ.

೯.  ತವರೂರ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
      ಸಾಸಿವೆಯಷ್ಟು ಮರಳಿಲ್ಲ ಬಾನಲ್ಲಿ
      ಬಿಸಿಲಿನ ಬೇಗೆ ಸುಡಲಿಲ್ಲ

೧೦. ನೀರ ಮೇಲೆ ನೀರು ನೀರಾಚೆ ತಾವರೆ
        ತಾವರೆಯಾಚೆ ತವರೂರು - ಹೋದಾರೆ
        ತಿರುಗಿ ಬರುವುದಕೆ ಮನಸಿಲ್ಲ.

೧೧.  ಒಬ್ಬರಿರುವ ಮನೆಗೆ ಹಬ್ಬದಿರು ಮಲ್ಲಿಗೆ
         ಒಬ್ಬಳೇ ಕೂದು ಮುಡಿಲಾರೆ ಮಲ್ಲಿಗೆ
         ಹಬ್ಬೋಗು ತನ್ನ ತವರೀಗೆ

No comments:

Post a Comment